ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ವಲಯದ ಹುಂಚದಕಟ್ಟೆಯಲ್ಲಿ ವಿಶೇಷ ಕ್ರೀಡಾಕೂಟವೊಂದು ಸಂಭ್ರಮದಿಂದ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಶ್ರೀಮಾತಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮೀಣ ಮಹಿಳೆಯರಿಗಾಗಿ ಈ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ದಿನವಿಡೀ ಮನೆಯ ಅಡುಗೆ ಮತ್ತು ನಿರಂತರ ಗೃಹಕೆಲಸಗಳಲ್ಲಿ ತೊಡಗಿಕೊಳ್ಳುವ ಗ್ರಾಮೀಣ ಮಹಿಳೆಯರು, ಈ ದಿನ ತಮ್ಮ ದೈನಂದಿನ ಜಂಜಾಟಗಳನ್ನು ಮರೆತು ಕೆಸರು ಗದ್ದೆಗೆ ಇಳಿದು ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಕೆಸರು ಗದ್ದೆ ಸ್ಪರ್ಧೆಗಳು ಪ್ರೇಕ್ಷಕರ ಆಕರ್ಷಣೆಯ ಕೇಂದ್ರಬಿಂದುವಾದವು. ಮಹಿಳೆಯರಿಗಾಗಿ ಅಗ್ಗ ಜಗ್ಗಾಟ, ಕೆಸರು ಗದ್ದೆ ಓಟ ಸೇರಿದಂತೆ ಹಲವು ವಿಭಿನ್ನ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಕೆಸರಿನಲ್ಲಿ ಬಿದ್ದು, ಎದ್ದು ಆಡುತ್ತಾ ಮಹಿಳೆಯರು ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದರು. ಈ ಕಾರ್ಯಕ್ರಮವು ಮಹಿಳೆಯರಿಗೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗುವುದರ ಜೊತೆಗೆ ಮನರಂಜನೆ ನೀಡಿತು.

