ಸಾಗರ:ಜು.17: ಸುಮಾರು ಒಂದು ವಾರದ ಕಾಲ ಮಳೆ ವಿರಾಮ ನೀಡಿದ್ದ ನಂತರ ಗುರುವಾರ ಸಂಜೆ ಸಾಗರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದು
ಗುರುವಾರ ಸಂಜೆ ಆರಂಭವಾದ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ. ಮಳೆಯ ಆಗಮನದಿಂದ ಕೃಷಿ ಚಟುವಟಿಕೆಗಳಿಗೆ ಸಹ ಅನುಕೂಲವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಸಾಗರ ತಾಲ್ಲೂಕಿನ ಕುಗ್ವೆ, ತಾಳಗುಪ್ಪ, ಉಳ್ಳೂರು, ಕಾಸ್ಪಾಡಿ, ಕರ್ಕಿಕೊಪ್ಪ, ತುಂಬೆ, ವರದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಪುನರಾರಂಭವಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಮಳೆ ಕ್ಷೀಣಗೊಂಡಿದ್ದ ಕಾರಣ ಜಲಾಶಯಗಳ ಒಳಹರಿವಿನ ಮೇಲೂ ಪರಿಣಾಮ ಕಂಡುಬಂದಿತ್ತು. ಇದೀಗ ಮತ್ತೆ ಮಳೆ ಆರಂಭವಾಗಿರುವುದು ಶರಾವತಿ ಕಣಿವೆಯ ಜನರಲ್ಲಿ ಸಂತಸ ಮೂಡಿಸಿದೆ.

