ಶಿವಮೊಗ್ಗ : ಇತ್ತೀಚೆಗೆ ಸುರಿದ ಭಾರೀ ಮಳೆಗೆ ಹೊಸನಗರ ತಾಲೂಕಿನ ನಗರ ಹೋಬಳಿ ಅಂಡಗದೊದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಿನಗದ್ದೆ ಗ್ರಾಮದ ವಾಸಿ ವೀರಪ್ಪಗೌಡ ಮನೆಯ ಪಕ್ಕದ ಧರೆ ಕುಸಿದಿದೆ. ಇದು ಹೀಗೆ ಮುಂದುವರದಲ್ಲಿ ಮನೆಗೆ ಧಕ್ಕೆ ಉಂಟಾಗಲಿದ್ದು ದೊಡ್ಡ ಅವಘಡಕ್ಕೆ ನಾಂದಿ ಹಾಡಬಹುದು ಎಂಬ ಸುದ್ದಿ ತಿಳಿದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಸಮಯ
ಮಾತನಾಡಿದ ಅವರು ಈ ಘಟನೆ ಕುರಿತು ಈಗಾಗಲೇ ಇತ್ತೀಚಿನ ಹೊಸನಗರ ಕೆಡಿಪಿ ಸಭೆಯಲ್ಲಿ ಚರ್ಚಿಸಿದ್ದೆ. ನಿವಾಸಿಗಳನ್ನು ಕೂಡಲೇ ಪಕ್ಕದ ರ್ಯಾವೆ ಗ್ರಾಮಕ್ಕೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ನಿಜಕ್ಕೂ ಮನೆ ಅಪಾಯ ಸ್ಥಿತಿಯಲ್ಲಿದೆ. ಮನೆಯ ಮಾಲೀಕರಿಗೆ ಬೇರೆ ಕಡೆಯಲ್ಲಿ ನೂತನ ಮನೆ ನಿರ್ಮಿಸಿಕೊಳ್ಳಲು ಸರಕಾರದ ವತಿಯಿಂದ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಈಗಾಗಲೇ PMGSY ಯೋಜನೆ ಅಡಿಯಲ್ಲಿ ಈ ಭಾಗದ ನಾಲ್ಕು ಕಿ.ಮಿ.ನೂತನ ರಸ್ತೆ ನಿರ್ಮಾಣಕ್ಕೆ 40 ಲಕ್ಷ ಅನುದಾನ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲದೆ 1 ಕೋಟಿ ಅನುದಾನದಲ್ಲಿ ಸೂಲದಮಕ್ಕಿ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯಲಿದೆ. ಇದರಿಂದ ಯಡೂರು ಸಂಪರ್ಕಕ್ಕೆ ಅನುಕೂಲ ಆಗಲಿದೆ. ಮುಂಬರುವ ದಿನಗಳಲ್ಲಿ ಈ ಭಾಗಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳವ ಇಂಗಿತ ವ್ಯಕ್ತಪಡಿಸಿದ ಆರಗ ಜ್ಞಾನೇಂದ್ರ, ಇಂದಿನ ರಾಜ್ಯ ಸರಕಾರದಲ್ಲಿ ಅನುದಾನ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದರು.

