ಶಿವಮೊಗ್ಗ: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮುಸಿಯನ (ಲಂಗೂರ್) ಉಪಟಳ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಮೊನ್ನೆತಾನೇ ಕಾಶಿಪುರ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಭೀಕರ ದಾಳಿ ನಡೆಸಿ ಗಾಯಗೊಳಿಸಿದ್ದ ಮುಸಿಯ, ನಿನ್ನೆ ಶಿವಮೊಗ್ಗದ ಹರಕೆರೆ ಸಮೀಪ 47 ವರ್ಷದ ಗಣೇಶ್ ಎಂಬುವವರ ಮೇಲೆ ಏಕಾಏಕಿ ಎರಗಿ ದಾಳಿ ನಡೆಸಿದೆ.
ದಾಳಿಯಿಂದ ಗಣೇಶ್ ಗಾಯಗೊಂಡಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ತಕ್ಷಣವೇ ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಪ್ರಮೋದ ಕೆ ಹಾಗೂ ಗಸ್ತು ಅರಣ್ಯ ಪಾಲಕರಾದ ಮಾಲ್ತೇಶ್ ಸೂರ್ಯವಂಶಿ, ಚರಣ್ ರಾಜ್, ಸಂತೋಷ್ ಮೂಲಿಮನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಪಶುವೈದ್ಯಾಧಿಕಾರಿ ಮುರಳಿ ಹಾಗೂ ಅವರ ತಂಡ, ಪ್ರಾಣಿ ಪ್ರಿಯ ಸ್ನೇಕ್ ವಿಕ್ಕಿ ಮತ್ತು ಸ್ನೇಹಿತರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ, ಸಾರ್ವಜನಿಕರಿಗೆ ಸಿಂಹಸ್ವಪ್ನವಾಗಿದ್ದ ಮುಸಿಯನನ್ನು ಯಶಸ್ವಿಯಾಗಿ ಸೆರೆಹಿಡಿದಿದೆ. ಕೊನೆಗೂ ಮುಸಿಯ ಬಲೆಗೆ ಬಿದ್ದಿರುವುದರಿಂದ ಕಾಶಿಪುರ ಹಾಗೂ ಹರಕೆರೆ ಭಾಗದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಹಿಡಿದ ಮುಸಿಯನನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ಇಲಾಖೆ ಕ್ರಮ ಕೈಗೊಂಡಿದೆ.

