ಶಿವಮೊಗ್ಸಗ: ಸಚಿವ ನಾಗೇಂದ್ರನ ಕೈ ಬಿಡಿ ಅಷ್ಟೆ. ಇದು ಆ.13ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಬಿಜೆಪಿ-ಮಿತ್ರ ಪಕ್ಷಗಳ ಪ್ರಮುಖ ಒಂದಂಶದ ಹೋರಾಟವಾಗಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿ. ನಾಗೇಂದ್ರ ಅವರ ಪರವಾಗಿ ಮಾತನಾಡಿ ಯಾರ ಮೇಲೆ ಪ್ರಕರಣವಿಲ್ಲ? ನನ್ನ ಮೇಲೂ ಪ್ರಕರಣವಿದೆ. ಎಲ್ಲರ ಮೇಲೂ ಪ್ರಕರಣವಿದೆ ಎಂದಿರುವುದು ಜೊತೆಗಿರುವವರು ಓಡಾಡಿಕೊಂಡಿರಲಿ ಎಂಬಂತಾಗಿದೆ. ಇಂಥಹ ಹೇಳಿಕೆಯನ್ನು ಮುಖ್ಯಮಂತ್ರಿಗಳಿಂದ ನಿರೀಕ್ಷಿಸಿರಲಿಲ್ಲ. ಡಿಕೆಶಿ ಮೇಲಿರುವ ಪ್ರಕರಣದ ಸ್ವರೂಪವೇ ಬೇರೆ. ನಾಗೇಂದ್ರ ಮೇಲಿರುವ ಪ್ರಕರಣಗಳ ಸ್ವರೂಪವೇ ಬೇರೆ. ಇಂಥಹ ಬೇಜವಾಬ್ದಾರಿ ಹೇಳಿಕೆಗಳು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿವೇಶನದ ಸಂದರ್ಭದಲ್ಲಿಯೇ ನಾಗರ ಪಂಚಮಿ ಹಬ್ಬವೂ ಬರುತ್ತಿದೆ. ನಾಗರಾಜನಿಗೆ ಹಾಲೆರೆಯಲಾಗುತ್ತದೆ. ಆದರೆ ಭ್ರಷ್ಟಾಚಾರ ಆರೋಪ ಹೊತ್ತು ಸಚಿವರಾದ ನಾಗೇಂದ್ರನಂತಹ ದುಷ್ಟರಿಗೆ ಹಾಲೆರೆಯುವ ಮನಸ್ಥಿತಿಯಲ್ಲಿ ನಾವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ವಿವಿಧ ಪಿಂಚಣಿಗಳನ್ನು ಸರ್ಕಾರ 4-5 ತಿಂಗಳಿಂದ ನಿಲ್ಲಿಸಿದೆ. ಪರಿಶೀಲನೆ ಹೆಸರಿನಲ್ಲಿ ರಾಜ್ಯ ಸರ್ಕಾರವು ನಗರದಲ್ಲಿ ಸುಮಾರು 6 ಸಾವಿರ ಜನರ ಪಿಂಚಣಿಯನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಕೂಡಲೇ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಿಂಚಣಿದಾರರ ಪರವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಸಿದ್ದಾರೆ.

