88
ಶಿವಮೊಗ್ಗ : ಭದ್ರಾವತಿ ತಾಲೂಕಿನ ಆನವೇರಿ ಅರಸಘಟ್ಟ ತಾಂಡಾ ತಿರುವಿನ ಬಳಿ ದಿನಪತ್ರಿಕೆ ವಿತರಿಸುತ್ತಿದ್ದ ಯುವಕನಿಗೆ ಕಾರು ಡಿಕ್ಕಿ ಹೊಡೆದು, ಚಾಲಕ ಕಾರು ನಿಲ್ಲಿಸದೆ ಪರಾರಿಯಾದ ಘಟನೆ ನಡೆದಿದೆ.
ಆನವೇರಿ ನಿವಾಸಿ, ಪತ್ರಿಕಾ ವಿತರಕ ಧನುಷ್ (20) ಗಾಯಗೊಂಡ ಯುವಕ. ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಪತ್ರಿಕೆ ಹಂಚಲು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಭರದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಪಲ್ಟಿಯಾಗಿ ಧನುಷ್ಗೆ ಎಡಗಾಲು ಹಾಗೂ ಭುಜಕ್ಕೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ವಡೇರಪುರ ಕಡೆಯಿಂದ ಬಂದ ಕಾರು ಅಪಘಾತ ಎಸಗಿ ಮಂಗೋಟೆ ಕಡೆಗೆ ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

