Home ಅಪರಾಧ ನಕಲಿ ಪೊಲೀಸ್ ಅವತಾರ ಎತ್ತಿ ವಂಚಿಸುತ್ತಿದ್ದ ಆಂಧ್ರದ ಅಂತರ್ ರಾಜ್ಯ ಕಳ್ಳರ ಬಂಧನ, 4.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ನಕಲಿ ಪೊಲೀಸ್ ಅವತಾರ ಎತ್ತಿ ವಂಚಿಸುತ್ತಿದ್ದ ಆಂಧ್ರದ ಅಂತರ್ ರಾಜ್ಯ ಕಳ್ಳರ ಬಂಧನ, 4.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

by Mahesh malenaadu

ಶಿವಮೊಗ್ಗ : ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಒಂಟಿ ಮಹಿಳೆಯನ್ನು ವಂಚಿಸಿ ಬಂಗಾರದ ಸರ ಎಗರಿಸಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ಅಂತರ್ ರಾಜ್ಯ ಖದೀಮರನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯ ತನಿಖಾ ತಂಡ ಬಂಧಿಸಿದೆ.

​ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶ ರಾಜ್ಯದ ವಾಸಿಗಳಾದ ಸೈಯದ್ ಅಬ್ಬಾಸ್ ಅಲಿ ಹಾಗೂ ಹುಸೇನ್ ಭಾಷಾ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 4,35,000 ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಲಾಪುರದಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಅವರನ್ನು ತಡೆದ ಅಪರಿಚಿತ ಆರೋಪಿಗಳು ತಾವು ‘ಪೋಲಿಸ್ ಅಧಿಕಾರಿಗಳು’ ಎಂದು ಸುಳ್ಳು ಪರಿಚಯ ನೀಡಿದ್ದರು. ಬಳಿಕ ಮಹಿಳೆಯನ್ನು ನಂಬಿಸಿ, ಮೋಸದಿಂದ ಅವರ ಬಳಿಯಿದ್ದ ಬಂಗಾರದ ಸರವನ್ನು ಪಡೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ.ಜಿ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
​ಭದ್ರಾವತಿ ಉಪವಿಭಾಗದ ಡಿವೈಎಸ್ಪಿ ಪ್ರಕಾಶ್ ರಾಠೋಡ್ ಅವರ ಮೇಲ್ವಿಚಾರಣೆಯಲ್ಲಿ ಭದ್ರಾವತಿ ಗ್ರಾಮಾಂತರ ಪಿಐ ಹಾಗೂ ಪೇಪರ್ ಟೌನ್ ಪಿಎಸ್‌ಐ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಆಂಧ್ರಪ್ರದೇಶ ಮೂಲದ ಈ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Spread the love

You may also like

Leave a Comment