ಶಿವಮೊಗ್ಗ : ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯುತ್ ಕೇಬಲ್ ವೈರ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ತಾಲೂಕಿನ ಭದ್ರಾಪುರ ಗ್ರಾಮದ ನಿವಾಸಿ ವಾಗೀಶ ಎಂಬುವವರ ಜಮೀನಿನಲ್ಲಿ ಜುಲೈ 25 ರಂದು ಸುಮಾರು 1,10,000/- ಮೌಲ್ಯದ ವಿದ್ಯುತ್ ಕೇಬಲ್ ವೈರ್ ಕಳುವಾಗಿತ್ತು. ಈ ಕುರಿತು ಅವರು ನೀಡಿದ ದೂರಿನನ್ವಯ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊಳೆಹೊನ್ನೂರು ಇನ್ಸ್ಪೆಕ್ಟರ್ ಶಿವಪ್ರಸಾದ್ ಎಂ ನೇತೃತ್ವದಲ್ಲಿ, ಪಿಎಸ್ಐ ಶಾಂತಲಾ, ಸಿಬ್ಬಂದಿಗಳಾದ ಅಣ್ಣಪ್ಪ, ಪ್ರಸನ್ನ, ಪ್ರಕಾಶ ನಾಯ್ಕ, ಮಂಜುನಾಥ ಹಾಗೂ ಜಿಲ್ಲಾ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ ಮತ್ತು ಇಂದ್ರೇಶ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆಗಿಳಿದಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗದ ವಿದ್ಯಾನಗರ ನಿವಾಸಿ
ತೇಜಸ್.ಎಸ್ @ ತೇಜು ಹಾಗೂ ಭದ್ರಾವತಿಯ ಮಲ್ಲಿಗೆನಹಳ್ಳಿ ನಿವಾಸಿ
ಅನಿಲ್.ಎಲ್ @ ರೊಡ್ಡ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಕಳುವಾಗಿದ್ದ 1,10,000/- ಮೌಲ್ಯದ 110 ಮೀಟರ್ ವಿದ್ಯುತ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಒಟ್ಟು ಮಾಲಿನ ಮೌಲ್ಯ ₹1,30,000/- ಎಂದು ಅಂದಾಜಿಸಲಾಗಿದೆ.

